ಜವನೆರ್ ಬೆದ್ರ ಸಂಸ್ಥಾಪಕ ಅಮರ್ ಕೋಟೆ'ಗೆ "ರಾಷ್ಟ್ರೀಯ ಪ್ರಶಸ್ತಿ"; ಸಮಾಜ ಸೇವೆಗೆ ಸಂದ ಗೌರವ


ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಅಮರ್ ಕೋಟೆ ಅವರಿಗೆ ಅಮೇರಿಕನ್ ವಿಸ್ಡಮ್ ಪೀಸ್ ಎಜುಕೇಶನ್ ಆಕಾಡೆಮಿ ವತಿಯಿಂದ ನೀಡುವ ಗೋಲ್ಡನ್ ಐಕಾನಿಕ್ ಅವಾರ್ಡ್-2026ರ "ರಾಷ್ಟ್ರೀಯ ಸಮಾಜ ಸೇವಾ" ಪ್ರಶಸ್ತಿ ಲಭಿಸಿದೆ. ಸಮಾನ ಮನಸ್ಕರ ಯುವಕರ ತಂಡವೊಂದನ್ನು ಕಟ್ಟಿ ಕಳೆದ ಒಂದು ದಶಕಗಳಿಂದ ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಫೌಂಡೇಶನ್ ನೂರಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ.

ಸಮಾಜ ಒಳಿತಿಗಾಗಿ ಮಾಡಿರುವ ಹಾಗೂ ಮಾಡುತ್ತಿರುವ ನಿರಂತರ ಸೇವೆ ಹಾಗೂ ಮಾನವೀಯ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ಅಮೇರಿಕನ್ ವಿಸ್ಡಮ್ ಪೀಸ್ ಎಜುಕೇಶನ್ ಆಕಾಡೆಮಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ಗುಣಮಟ್ಟ ಹಾಗೂ ನಿರ್ವಹಣಾ ವ್ಯವಸ್ಥೆಯ ಪ್ರಮಾಣೀಕರಣ ಪಡೆದ ಸಂಸ್ಥೆಯಾಗಿದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭವೂ ಜನವರಿ 25 ರಂದು ಪುದುಚೇರಿಯಲ್ಲಿ ನಡೆದಿದ್ದು ಅಮರ್ ಕೋಟೆ ಪರವಾಗಿ ಅವರ ಪ್ರತಿನಿಧಿಯೊಬ್ಬರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಮರ್ ಕೋಟೆಯವರ ಸಮಾಜಸೇವೆ ಕಾರ್ಯ ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಸ್ತಾರಗೊಳ್ಳಲಿ ಎಂದು ಪ್ರಶಸ್ತಿ ಪ್ರಧಾನ ಸಂಧರ್ಭದಲ್ಲಿ ಹಾರೈಸಲಾಯಿತು.

ಸ್ವಚ್ಚತೆ, ಆರೋಗ್ಯ, ಇತಿಹಾಸ ಕ್ಷೇತ್ರದಲ್ಲಿ ಅಮರ್ ಕೋಟೆ ತಂಡದಿಂದ ಸೇವೆ:

ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಸಂಘಟನೆಗೆ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ "ಕ್ಲಿನ್ ಅಪ್ ಮೂಡುಬಿದಿರೆ" ಎಂಬ ವಿಶೇಷ ಅಭಿಯಾನವನ್ನು ಆರಂಭಿಸಿ ಆ ಮೂಲಕ ತಾವುಗಳೇ ಮೂಡೂಬಿದಿರೆಯ ವಿವಿಧ ಭಾಗದಲ್ಲಿ ನೂರು ವಾರಗಳ ಕಾಲ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದರು.  ಇದು ಮೂಡುಬಿದಿರೆ ಜನತೆಯ ಮನದಲ್ಲಿ ಸ್ವಚ್ಚತೆಯ ಬಗೆಗಿನ ಹೊಸ ಆರಿವು ಮೂಡಲು ದಾರಿದೀಪವಾಯಿತು. ಮಾತ್ರವಲ್ಲದೆ ಮೂಡುಬಿದಿರೆ ತಾಲೂಕಿನ ಹಲವಾರು ಭಾಗದಲ್ಲಿ ವೃಕ್ಷಗಳನ್ನು ನೆಟ್ಟು ಅವುಗಳನ್ನು ತಾವುಗಳೇ ಪೋಷಣೆಯ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಪರಿಸರದ ಮೇಲಿರುವ ಕಾಳಜಿಗೆ ಮತ್ತೊಂದು ಸಾಕ್ಷಿ.

ರೋಗಿಗಳಿಗೆ ತುರ್ತು ರಕ್ತದ ಅವಶ್ಯಕತೆಯಿದ್ದ ಸಂಧರ್ಭದಲ್ಲಿ ಜವನೆರ್ ಬೆದ್ರ 'ರಕ್ತ ನಿಧಿ'ಯ ಮೂಲಕ ಉಚಿತವಾಗಿ ರಕ್ತ ಪೂರೈಕೆಯ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. 

ವೀರ ರಾಣಿ ಅಬ್ಬಕ್ಕ ಮೂಡುಬಿದಿರೆಯ ಮಣ್ಣಿನ ಮಗಳು ಎಂಬ ಆಭಿಯಾನವನ್ನು ಆರಂಭಿಸುವ ಮೂಲಕ ಅಬ್ಬಕ್ಕಳಿಗೆ ತವರು ನೆಲದ ಮಣ್ಣಿನ ಗೌರವವನ್ನು ನೀಡುವಲ್ಲಿ ಶ್ರಮ ವಹಿಸಿದವರಲ್ಲಿ ಪ್ರಮುಖರು.