ಪುತ್ತೂರಿನ ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್'ಗೆ ಪ್ರತಿಷ್ಠಿತ ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರ


ಪುತ್ತೂರು: ಭರತನಾಟ್ಯ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಪ್ರತಿಷ್ಠಿತ 'ವೀರರಾಣಿ ಅಬ್ಬಕ್ಕ ಗೌರವ' ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ.) ಮಂಗಳೂರು ವಿಭಾಗ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇದರ ಆಶ್ರಯದಲ್ಲಿ ಜರಗುವ ರಾಣಿ ಅಬ್ಬಕ್ಕಳ 500ನೇ ಜನ್ಮಶತಮಾನೋತ್ಸವದ ಪ್ರಯುಕ್ತ ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಆನೇಕ ಸಾಧಕ ಮಹಿಳೆಯರಿಗೆ ಗೌರವ ಪುರಸ್ಕಾರ ನೀಡಿ ಅಭಿನಂದಿಸಲು ತೀರ್ಮಾನಿಸಲಾಗಿದೆ.

ಪ್ರತಿಷ್ಠಿತ ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಅವರು ಭರತನಾಟ್ಯದಲ್ಲಿ ಮಾಡಿರುವ ಸಾಧನೆ ಅಪಾರ. ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್‌ರವರು ಸಾಹಿತಿ ಹಾಗೂ ಉಪನ್ಯಾಸಕರಾಗಿದ್ದ ದಿವಂಗತ ಎಸ್.ಆರ್.ಪಾಡಿ ಹಾಗೂ ಎಸ್.ಆರ್.ವೆಂಕಟೇಶ್ವರಿಯವರ ಪುತ್ರಿ. ಬಾಲ್ಯದಲ್ಲಿಯೇ ಭರತನಾಟ್ಯದಲ್ಲಿ ಅತಿಯಾದ ಆಸಕ್ತಿ ಹೊಂದಿದ್ದ ಇವರು ಆರಂಭಿಕ ಭರತನಾಟ್ಯ ಶಿಕ್ಷಣವನ್ನು ವಿದುಷಿ ಶ್ರೀಮತಿ ಸುಮಾ ರಾಮಪ್ರಸಾದ'ರ ಬಳಿ ಪಡೆದರು. ಆ ಬಳಿಕ ಮಂಗಳೂರಿನ ವಿದುಷಿ ಶ್ರೀಮತಿ ಗೀತಾ ಸರಳಾಯರ ಬಳಿ ನೃತ್ಯಭ್ಯಾಸ ಮುಂದುವರೆಸಿ ಪೂರ್ಣ ಪ್ರಮಾಣದ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡರು. ವಿದುಷಿ ಶ್ರೀಮತಿ ಶಾಲಿನಿ  ಆತ್ಮಭೂಷಣ್ ಅವರು ಈವರೆಗೆ ಸುಮಾರು 600ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು, 2004ರಲ್ಲಿ ಪುತ್ತೂರಿನ ಮುಕ್ರಂಪಾಡಿಯಲ್ಲಿ ನೃತ್ಯೋಪಾಸನಾ ಕಲಾಕೇಂದ್ರ(ರಿ.) ಆರಂಭಿಸಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಲು ಪ್ರಾರಂಭಿಸಿದರು. 

ನೃತ್ಯೋಪಾಸನಾ ಕಲಾಕೇಂದ್ರ ಕಳೆದ 19 ವರ್ಷಗಳಿಂದ ಶೇ. 100 ಫಲಿತಾಂಶ ನೀಡುತ್ತಿದ್ದು, ಸಂಸ್ಥೆಯ ನೃತ್ಯಗುರು ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ೨೦೨೨-೨೩ರ ವಿಶ್ವವಿಖ್ಯಾತ ಮೈಸೂರು ದಸರಾ, ಜಗದ್ವಿಖ್ಯಾತ ಹಂಪಿ ಉತ್ಸವ, ಹಾವೇರಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೂಡುಬಿದರೆ ಜಾಗತಿಕ ಸಾಂಸ್ಕೃತಿಕ ಜಾಂಬೂರಿ-೨೦೨೩, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ, ಧರ್ಮಸ್ಥಳ ಲಕ್ಷದೀಪೋತ್ಸವ, ಸುಬಹ್ಮಣ್ಯ ಕಿರುಷಷ್ಠಿ, ವೇಣೂರು ಮಹಾಮಸ್ತಕಾಭಿಷೇಕ, ಕರಾವಳಿ ಉತ್ಸವ, ಆಳ್ವಾಸ್ ನುಡಿಸಿರಿ ಸೇರಿದಂತೆ ರಾಜ್ಯದ ಆನೇಕ ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡುತ್ತಾ ಬರುತ್ತಿದ್ದಾರೆ. 

ನೃತ್ಯ ಶಿಕ್ಷಣವನ್ನು ಪಡೆದುಕೊಳ್ಳಲು ಕಷ್ಟಕರವಾಗುವ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ  ಹಿಂದುಳಿದ ಕುಟುಂಬದ ಸುಮಾರು 25ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 'ನೃತ್ಯಶಿಕ್ಷಣ-ಪೋಷಣೆ' ಯೋಜನೆಯ ಆಡಿಯಲ್ಲಿ ಸಂಪೂರ್ಣ ಉಚಿತ ನೃತ್ಯ ಶಿಕ್ಷಣವನ್ನು ನೀಡುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ. 

ಉನ್ನತ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಪತ್ರಿಕೋದ್ಯಮ, ಭರತನಾಟ್ಯ ಹಾಗೂ ಕನ್ನಡ ಸೇರಿ ಮೂರು ವಿಭಾಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರಿಗೆ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ಶ್ರೀನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.)¸ ಸುರತ್ಕಲ್ ವತಿಯಿಂದ ನಾಟ್ಯಶಿಕ್ಷಣ ಪುರಸ್ಕಾರ, ೬ನೇ ಅಖಿಲ ಕರ್ನಾಟಕ ಬೆಳದಿಂಗಳ ಷಾಹಿತ್ಯ ಷಮ್ಮೇಳನದಲ್ಲಿ ರಾಜ್ಯ ಮಟ್ಟದ ‘ಕರ್ನಾಟಕ ನೃತ್ಯಕಲಾ ರತ್ನ’, ಶ್ರೀ ಶಾರದಾ ಕಲಾಕೇಂದ್ರ ಟ್ರಸ್ಟ್(ರಿ) ವತಿಯಿಂದ‚ ರಜತಶ್ರೀ‛ ಪ್ರಶಸ್ತಿ, ಮೈಷೂರಿನ ಕುಮಾರ್ ಪ್ರದರ್ಶನ ಕಲೆಗಳ ಕೇಂದ್ರ(ರಿ) ವತಿಯಿಂದ ‘ಕಲೆಮನೆ’ ವಾರ್ಷಿಕ ಪ್ರಶಷ್ತಿ -೨೦೨೨ ಸೇರಿ ಹಲವಾರು ಗೌರವ ಪುರಸ್ಕಾರಗಳು ಸಂದಿವೆ. 

ಭರತನಾಟ್ಯ ಕ್ಷೇತ್ರದಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ ವೀರರಾಣಿ ಅಬ್ಬಕ್ಕ' ಗೌರವ ಪುರಸ್ಕಾರ ಆಯ್ಕೆ ಮಾಡಲಾಗಿದ್ದು, ಈ ಕಾರ್ಯಕ್ರಮವೂ ಪುತ್ತೂರಿನ  ವಿವೇಕಾನಂದ ಕಾಲೇಜಿನಲ್ಲಿ  16-ಫೆಬ್ರವರಿ-2026ರಂದು ನಡೆಯಲಿದೆ.