ಮೂಡುಬಿದಿರೆ: ಬೆದ್ರದ ಇತಿಹಾಸ ಪ್ರಸಿದ್ದ ಕೋಟಿ-ಚೆನ್ನಯ ಕಂಬಳಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂಡುಬಿದಿರೆಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಈ ಕಂಬಳಕೂಟ ನಡೆಯಲಿದ್ದು, ಬೆದ್ರದ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಒಂಟಿಕಟ್ಟೆಯಲ್ಲಿ ನಾಳೆ ಅಂದರೆ 31-01-2026ರ ಶನಿವಾರ ಗಣ್ಯರ ಉಪಸ್ಥಿಯಲ್ಲಿ ಕಂಬಳಕೂಟಕ್ಕೆ ಚಾಲನೆ ದೊರಕಲಿದೆ. ಕಂಬಳದ ಕರೆ ನಿರ್ಮಾಣ ಕಾರ್ಯದ ಜೊತೆಗೆ, ಕಂಬಳಕೂಟಕ್ಕೆ ಆಗಮಿಸುವ ಕೋಣಗಳಿಗೆ ನಿಲ್ಲುವ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಸಹಿತ ಬಹುತೇಕ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿದ್ದು, ಅಬ್ಬಕ್ಕ ಸಂಸ್ಕೃತಿ ಗ್ರಾಮ ಐತಿಹಾಸಿಕ ಕಂಬಳ ಕೂಟಕ್ಕೆ ಸಜ್ಜಾಗಿ ನಿಂತಿದೆ.
ನವೀಕರಣಗೊಂಡ ಕಂಬಳ ಕರೆ:
ಕಡಲಕೆರೆ ನಿಸರ್ಗಧಾಮ, ಅಬ್ಬಕ್ಕ ಸಂಸ್ಕೃತಿ ಗ್ರಾಮ ಒಂಟಿಕಟ್ಟೆ, ಮೂಡುಬಿದಿರೆ ಇಲ್ಲಿನ ಕಂಬಳ ಕರೆಗೆ ನವೀಕರಣದ ಸ್ವರ್ಶ ನೀಡಲಾಗಿದ್ದು, ಕಳೆದ ಬಾರಿ ಕಂಬಳ ಕರೆಯಲ್ಲಿ ಕೆಲವು ತಾಂತ್ರೀಕ ದೋಷಗಳಿದ್ದ ಕಾರಣ ಕೋಣಗಳು ಓಡುವ ಸಂಧರ್ಭದಲ್ಲಿ ತೊಂದರೆಯಾಗಿತ್ತು, ಕಂಬಳದ ಯಜಮಾನರು ಈ ಬಗ್ಗೆ ಕಂಬಳ ಸಮಿತಿಗೆ ತಿಳಿಸಿದ್ದು ಈ ಬಾರಿ ಕಂಬಳದ ಕರೆಯನ್ನು ನವೀಕರಣ ಮಾಡುವ ಮೂಲಕ ಸುಮಾರು ೧೪೫ ಮೀಟರ್ ಗೆ ಕರೆಯ ಉದ್ದವನ್ನು ಹೆಚ್ಚಿಸಲಾಗಿದೆ. ಈ ಕಾರ್ಯವನ್ನು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಅತೀವ ಮುತುರ್ವಜಿಯಲ್ಲಿ ಈ ಎಲ್ಲಾ ನವೀಕರಣ ಕಾರ್ಯಗಳನ್ನು ನಿರ್ವಹಿಸಿದ್ದಾರೆ.
ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆಯ ಸಂಭ್ರಮ; ಸಾಧಕರಿಗೆ ಸನ್ಮಾನ:
ಮೂಡುಬಿದಿರೆಯ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಎಂಟು ವರ್ಷಗಳ ಹಿಂದೆ ಬೆದ್ರದ ಕಂಬಳಕೂಟದಲ್ಲಿ ಚೌಟ ರಾಣಿ ಅಬ್ಬಕ್ಕಳ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ವಿಶೇಷವಾಗಿ ಕಂಬಳ ಕೂಟವನ್ನು ಆರಂಭಿಸಲಾಯಿತು, ಆ ಬಳಿಕ ಶಾಸಕರ ಮುತುವರ್ಜಿಯಲ್ಲಿ ಕಂಬಳಕೂಟದ ಸಭಾ ಕಾರ್ಯಕ್ರಮ ನಡೆಯುವ ವೇದಿಕೆಯ ಬಲಭಾಗದಲ್ಲಿ ವೀರ ರಾಣಿ ಅಬ್ಬಕ್ಕಳ ಹಿರಿದಾದ ಮೂರ್ತಿಯನ್ನು ನಿರ್ಮಾಣ ಮಾಡಲಾಯಿತು ಅಲ್ಲಿಂದ ಇಲ್ಲಿಯವರೆಗೆ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಿ ಆ ಬಳಿಕ ಕಂಬಳಕೂಟಕ್ಕೆ ಚಾಲನೆಯನ್ನು ನೀಡುವ ಮೂಲಕ ವಿಶೇಷ ರೀತಿಯ ಗೌರವ ನೀಡುತ್ತಾ ಬರಲಾಗುತ್ತಿದೆ.
ಚೌಟ ರಾಣಿ ಅಬ್ಬಕ್ಕಳ 500ನೇ ವರ್ಷದ ಜನ್ಮವರ್ಷಾಚರಣೆಯ ಸಂಭ್ರಮದಲ್ಲಿರುವ ಕಾರಣದಿಂದಾಗಿ ಸಾಧಕರಿಗೆ ರಾಣಿ ಅಬ್ಬಕ್ಕಳ ಹೆಸರಿನಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಬಂಜಾರ ಗ್ರೂಪ್ ನ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿಯವರಿಗೆ ರಾಣಿ ಅಬ್ಬಕ್ಕಳ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಇದರ ಜೊತೆಗೆ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕರಾದ ಅಮರ್ ಕೋಟೆ ನೇತೃತ್ವದ ತಂಡ ಕಳೆದ ಹಲವು ವರ್ಷಗಳಿಂದ ಸ್ವಚ್ಚತೆ, ಆರೋಗ್ಯ, ಮೂಡುಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕ ವಿಶೇಷ ಅಭಿಯಾನ ಹಾಗೂ ಇನ್ನಿತರ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಗುರುತಿಸಿ ವಿಶೇಷ ಸನ್ಮಾನ ಮಾಡಲಾಗುವುದು ಎಂದು ಕಂಬಳ ಸಮಿತಿಯ ಅಧ್ಯಕ್ಷರು ಈಗಾಗಲೇ ತಿಳಿಸಿದ್ದಾರೆ.
ರಾಣಿ ಅಬ್ಬಕ್ಕ ಸಾಧನೆಯ ಕುರಿತು ವಿಶೇಷ ಉಪನ್ಯಾಸ:
ಪೋರ್ಚುಗೀಸರ ವಿರುದ್ದ ಮೊಟ್ಟ ಮೊದಲು ತೊಡೆ ತಟ್ಟಿ ನಿಂತ ವೀರರಾಣಿ ಅಬ್ಬಕ್ಕಳ ವೀರಗಾಥೆಯನ್ನು ಇನ್ನಷ್ಟೂ ಜನರಿಗೆ ತಿಳಿಸುವ ಆನಿವಾರ್ಯತೆಯಿದ್ದು ಆ ನಿಟ್ಟಿನಲ್ಲಿ ಕಂಬಳಕೂಟದ ವೇದಿಕೆಯಲ್ಲಿ ಖ್ಯಾತ ವಾಗ್ಮಿಗಳಾದ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಇವರು ಅಬ್ಬಕ್ಕಳ ಕುರಿತಾದ ವಿಶೇಷ ಉಪನ್ಯಾನ ನೀಡಲಿದ್ದಾರೆ.
ಗಣ್ಯರ ಆಗಮನ; ಪ್ರತಿಯೊಬ್ಬರಿಗೆ ಭೋಜನದ ವ್ಯವಸ್ಥೆ:
ಮೂಡುಬಿದಿರೆಯ ಕಂಬಳವೆಂದರೆ ಜಿಲ್ಲೆಯ ಅತೀ ದೊಡ್ಡ ಕಂಬಳಗಳಲ್ಲಿ ಒಂದು. ವಿಶಾಲವಾದ ಜಾಗವನ್ನು ಹೊಂದಿರುವ ಈ ಕಂಬಳಕೂಟಕ್ಕೆ ಸುಮಾರು ೨೨೫ ಜತೆ ಕೋಣಗಳು ಬಂದಿರುವುದು ಇಲ್ಲಿಯವರೆಗಿನ ದಾಖಲೆ. ಈ ವರ್ಷವೂ ದಾಖಲೆಯ ಕೋಣಗಳು ಭಾಗವಹಿಸುವ ವಿಶ್ವಾಸದಲ್ಲಿರುವ ಕಂಬಳ ಆಯೋಜಕರು, ಇದಕ್ಕೆ ಬೇಕಾದ ಎಲ್ಲಾ ಸಕಲ ಸಿದ್ದತೆಗಳನ್ನು ಈಗಾಗಲೇ ಮಾಡಿಕೊಂಡಿದ್ದಾರೆ.
ಮೂಡುಬಿದಿರೆಯ ಕಂಬಳ ಜಿಲ್ಲೆಯ ಇತರ ಕಂಬಳ ಕೂಟಗಳಿಂದ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನ ಎಂದು ಕರೆಯಲು ಮತ್ತೊಂದು ಕಾರಣವೆಂದರೆ ಭೋಜನದ ವ್ಯವಸ್ಥೆ. ಕಂಬಳಕೂಟದಲ್ಲಿ ಪ್ರತಿಯೊಬ್ಬರಿಗೂ ಅಂದರೆ ಕಂಬಳ ವೀಕ್ಷಿಸಲು ಬರುವ ವೀಕ್ಷಕರಿಗೂ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿದ್ದು ಆ ಮೂಲಕ ಕಂಬಳದ ರಸದೌತಣದ ಜೊತೆಗೆ ಹೊಟ್ಟೆ ತುಂಬಿಸುವ ಕೆಲಸವನ್ನು ಈ ಕಂಬಳ ಸಮಿತಿ ಮಾಡುತ್ತಿದೆ.
ಮೂಡುಬಿದಿರೆಯ ಈ ಐತಿಹಾಸಿಕ ಕಂಬಳಕೂಟಕ್ಕೆ ಅತೀ ಹೆಚ್ಚು ವಿದೇಶಿ ಗಣ್ಯರು ಆಗಮಿಸುವುದು ವಾಡಿಕೆ. ಅದರಂತೆ ಈ ಬಾರಿಯೂ ಊರ ಹಾಗೂ ಪರವೂರ ಎಲ್ಲಾ ಕಂಬಳಾಭಿಮಾನಿಗಳು ಭಾಗವಹಿಸಿ ಈ ಕಂಬಳಕೂಟವನ್ನು ಯಶಸ್ವಿಗೊಳಿಸಬೇಕಾಗಿ ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರೀತಿಯ ಕರೆಯೋಲೆಯ ಮೂಲಕ ಆಹ್ವಾನಿಸಿದ್ದಾರೆ.
