ಮೂಡುಬಿದಿರೆ: ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ನ (ಎನ್ಸಿಸಿ) ೨೧ ಕರ್ನಾಟಕ ಬೆಟಾಲಿಯಾನ್ನಿಂದ ಆಳ್ವಾಸ್ನ ವಿದ್ಯಾಗಿರಿಯ ಆವರಣದಲ್ಲಿ ೧೦ ದಿನಗಳ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ನಡೆಯಿತು. ಮಂಗಳೂರಿನ ಎನ್ಸಿಸಿ ಸಮೂಹದ ಮುಖ್ಯ ಕಛೇರಿಯ ವ್ಯಾಪ್ತಿಗೊಳಪಟ್ಟ ವಿವಿಧ ಬ್ಯಾಟಾಲಿಯನ್ಗಳಿಂದ ೫೯೮ ಎನ್ಸಿಸಿ ಕೆಡೆಟ್ಗಳು ಭಾಗವಹಿಸಿದ್ದರು.
ಈ ಶಿಬಿರವು ಮೈಸೂರಿನಲ್ಲಿ ನಡೆಯಲಿರುವ ಥಲ್ ಸೇನಾ ಸ್ಪರ್ಧೆಗೆ ಎನ್ಸಿಸಿ ಕೆಡೆಟ್ಗಳನ್ನು ತರಬೇತಿಗೊಳಿಸುವ ಉದ್ದೇಶವನ್ನು ಹೊಂದಿತ್ತು. ಸುಮಾರು ೧೩೩ ಕೆಡೆಟ್ಗಳಿಗೆ ಫೈರಿಂಗ್, ಬ್ಯಾಟಲ್ ಕ್ರಾಫ್ಟ್, ಡ್ರಿಲ್, ನಕ್ಷೆ ಓದುವಿಕೆ, ರೈಫಲ್ನ ನಿರ್ವಹಣೆ, ಫೀಲ್ಡ್ ಕ್ರಾಫ್ಟ್, ಮತ್ತು ಮಿಲಿಟರಿ ವಿಷಯಗಳಲ್ಲಿ ತರಬೇತಿ ನೀಡಲಾಯಿತು, ಮಂಗಳೂರಿನ ಎನ್ಸಿಸಿ ಸಮೂಹದ ಮುಖ್ಯ ಕಛೇರಿಯಿಂದ ಒಟ್ಟು ೮೩ ಕೆಡೆಟ್ಗಳು ಮೈಸೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರಿನ ಎನ್ಸಿಸಿ ಸಮೂಹದ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಮಾತನಾಡಿ, ಶಿಬಿರಗಳಲ್ಲಿ ಕಲಿಯುವ ಶಿಸ್ತು, ದೇಶಭಕ್ತಿ, ತಾಳ್ಮೆ ಮತ್ತು ಒಗ್ಗಟ್ಟು ಉತ್ತಮ ವ್ಯಕ್ತಿತ್ವವಿಕಾಸಕ್ಕೆ ನೆರವಾಗುತ್ತದೆ ಎಂದರು. ಶಿಸ್ತು ಮತ್ತು ಸ್ವಚ್ಛತೆ ಕೇವಲ ಶಿಬಿರದ ಪರಿಸರದಲ್ಲಷ್ಟೆ ಅಲ್ಲ, ದಿನ ನಿತ್ಯದ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು. ನಂತರ ಕೆಡೆಟ್ಗಳಿಂದ ಸಾಂಸ್ಕೃತಿಕ ಕರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಮಾಂಡಿಂಗ್ ಆಫೀಸರ್ ಹಾಗೂ ೨೧ ಕರ್ನಾಟಕ ಬೆಟಾಲಿಯಾನ್ನ ಕರ್ನಲ್ ರಾಹುಲ್ ಚೌಹಾನ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಗುರೀಂದರ್ ಸಿಂಗ್, ಸುಬೇದಾರ್ ಮೇಜರ್ ಉನ್ನಿಕೃಷ್ಣನ್ ಹಾಗೂ ಇನ್ನಿತರ ಎನ್ಸಿಸಿ ಅಧಿಕಾರಗಳು, ಮಾರ್ಗದರ್ಶಕರು ಮತ್ತಿತರರು ಭಾಗವಹಿಸಿದ್ದರು.


