ISKCON Temple : ಬೆಂಗಳೂರಿನಲ್ಲಿದೆ ಇಸ್ಕಾನ್‌ ಎಂಬ ಅದ್ಭುತ!

ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದು ಇಸ್ಕಾನ್‌(ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್) ದೇಗುಲ(ISKCON Temple). ಈ ದೇಗುಲವನ್ನು ಮಾಜಿ ರಾಷ್ಟ್ರಪತಿಗಳಾದ ಶಂಕರ್‌ ದಯಾಳ್‌ ಶರ್ಮಾ ಅವರು 1997ರಲ್ಲಿ ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ರಾಜಾಜಿನಗರ ಬಳಿಯ ಬೆಟ್ಟವೊಂದರ ಮೇಲೆ ಈ ದೇಗುಲವನ್ನು ಗ್ರಾನೈಟ್, ಮಾರ್ಬಲ್ ಮತ್ತು ಕೊರಿಯನ್ ಗಾಜಿನಿಂದ ನಿರ್ಮಿಸಲಾಯಿತು. ಈ ದೇವಾಲಯದಲ್ಲಿ ವಾರ್ಷಿಕವಾಗಿ ರಥೋತ್ಸವವನ್ನು ನಡೆಸಲಾಗುತ್ತದೆ. ಆ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುತ್ತಾರೆ.

ಅಂದ ಹಾಗೆ ಈ ಇಸ್ಕಾನ್‌ ದೇವಾಲಯದಲ್ಲಿ ರಾಧಾ ಕೃಷ್ಣ ದೇವರನ್ನು ಮುಖ್ಯ ದೇವರನ್ನಾಗಿ ಪೂಜಿಸಲಾಗುತ್ತದೆ. ಅದಲ್ಲದೆ ಇಲ್ಲಿ ಬಲರಾಮ, ಚೈತನ್ಯ ಮಹಾಪ್ರಭು, ನಿತ್ಯಾನಂದ ಪ್ರಭು, ಪ್ರಹ್ಲಾದ ನರಸಿಂಹ, ಶ್ರೀಲ ಮಹಾಪ್ರಭು ಮತ್ತು ಶ್ರೀನಿವಾಸ ಗೋವಿಂದ ದೇವತೆಗಳನ್ನೂ ಪೂಜಿಸಲಾಗುತ್ತದೆ.

ಇಸ್ಕಾನ್‌ ಆಧ್ಯಾತ್ಮದತ್ತ ಒಲವಿರುವವರಿಗೆ ಹಾಗೂ ಭಕ್ತರಿಗೆ ಹಲವಾರು ಆಧ್ಯಾತ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಗಾಗ ನಡೆಸುತ್ತಿರುತ್ತದೆ. ದೇಶಾದ್ಯಂತ ಇರುವ 1350 ಶಾಲೆಗಳ 16 ಲಕ್ಷ ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರಾ ಯೋಜನೆ ಮೂಲಕ ಪೌಷ್ಟಿಕ ಆಹಾರವನ್ನು ಈ ಸಂಸ್ಥೆ ನೀಡುತ್ತಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸಂಸ್ಥೆಯ ವತಿಯಿಂದ ಮಾಡಲಾಗುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಲಾಗಿದೆ.

ಪ್ರತಿ ಧಾರ್ಮಿಕ ವಿಶೇಷ ದಿನಗಳಂದು ಇಲ್ಲಿ ಪೂಜಾ ವಿಧಿಗಳು ಆಕರ್ಷಕವಾಗಿ ಮತ್ತು ಭಕ್ತಿಪೂರ್ವಕವಾಗಿ ನಡೆಯುತ್ತವೆ. ದೇವಸ್ಥಾನದ ಆವರಣದೊಳಗೆ ಇರುವ ಅಪರೂಪದ ವಸ್ತುಗಳ ಶಾಪಿಂಗ್‌ ಇಲ್ಲಿಯ ಮತ್ತೊಂದು ಆಕರ್ಷಣೆ.

Post a Comment

0 Comments